ಬೈಂದೂರು: ದೇಶದ ಪ್ರತಿಷ್ಠಿತ ಕೌಶಲ್ಯಾಭಿವೃದ್ದಿ ಸಂಸ್ಥೆ ಅಜಿನೋರಾ ಇದರ ಬೈಂದೂರು ಶಾಖೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಇದರ ಮಾಜಿ ಆಡಳಿತ ಮೊಕ್ತೇಸರ ಕೃಷ್ಣಪ್ರಸಾದ ಅಡ್ಯಂತಾಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಹುತೇಕವಾಗಿ ಪಟ್ಟಣ ಪ್ರದೇಶದಲ್ಲಿ ಮಾತ್ರ ಇರುವ ಅವಕಾಶ ಸಂಸದರು ಹಾಗೂ ಶಾಸಕರ ಪ್ರಯತ್ನದಿಂದ ಬೈಂದೂರಿನಂತಹ ಗ್ರಾಮೀಣ ಭಾಗಕ್ಕೆ ದೊರೆತಿದೆ.ಈಗಾಗಲೇ ಈ ಸಂಸ್ಥೆಯಿಂದ ತರಬೇತಿ ಪಡೆದ 40 ವಿದ್ಯಾರ್ಥಿಗಳು ಜರ್ಮನ ದೇಶದಲ್ಲಿ ಉದ್ಯೋಗ ಪಡೆದಿದ್ದಾರೆ.ಬೈಂದೂರಿನಲ್ಲಿ ಒಟ್ಟು 600 ವಿದ್ಯಾರ್ಥಿಗಳ ತರಬೇತಿ ನೊಂದಣಿ ಮಾಡಿದ್ದು ನಮ್ಮ ಯುವ ಸಮುದಾಯ ಕೌಶಲ್ಯ ತರಬೇತಿ ನೀಡಿ ಜಾಗತಿಕ ಮಟ್ಟದಲ್ಲಿ ಅವಕಾಶ ಒದಗಿಸುವುದು ಮತ್ತು ಉದ್ಯೋಗ ಭದ್ರತೆ ನೀಡುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ ಕೇಂದ್ರ ಸರಕಾರ ದೇಶದ ಯುವ ಸಮುದಾಯದ ಸಾಮರ್ಥ್ಯ ಸದ್ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಕೌಶಲ್ಯಾಭಿವೃದ್ದಿ ಸಂಸ್ಥೆ ಮೂಲಕ ಅತ್ಯುತ್ತಮ ತರಬೇತಿ ಯೋಜನೆ ಜಾರಿಗೆ ತಂದಿದೆ.ಈ ಯೋಜನೆ ಬೈಂದೂರಿಗೆ ದೊರೆತಿರುವುದು ಕ್ಷೇತ್ರದ ಹೆಮ್ಮೆಯಾಗಿದೆ.ಉದ್ಯೋಗ ಮೇಳದ ಮೂಲಕ ನೂರಾರು ಯುವಕರಿಗೆ ಉದ್ಯೋಗದ ಅವಕಾಶ ದೊರೆತಿದೆ.ಅಜಿನೋರಾ ಸಂಸ್ಥೆ ಸೂಕ್ತ ತರಬೇತಿ ನೀಡಿ ವಿದೇಶದಲ್ಲಿ ಅವಕಾಶ ಒದಗಿಸುವುದು ಅತ್ಯುತ್ತಮ ಯೋಜನೆಯಾಗಿದೆ ಹಾಗೂ ಬೈಂದೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ಸಂಸ್ಥೆ ಇದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಎಸ್.ರಾಜು ಪೂಜಾರಿ,ಸಂಸ್ಥೆಯ ರೂವಾರಿ ವೆಂಕಟೇಶ ಕಿಣಿ,ಕೇಂದ್ರ ಕೌಶಲ್ಯಾಭಿವೃದ್ದಿ ನಿರ್ದೇಶಕ ಸಿ.ಎಮ್.ಸಿಂಗ್,ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿ ಮ್ಯಾಥ್ಯೂ,ರಾಹುಲ್,ಅಜಿ ಅಗಸ್ಟೆನ್ ಉಪಸ್ಥಿತರಿದ್ದರು.

News/pic: Giri shiruru