ಬೈಂದೂರು: ತಾಲೂಕು ಪಂಚಾಯತ್ ಬೈಂದೂರು, ಜಿಲ್ಲಾಡಳಿತ ಉಡುಪಿ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮ ಬೈಂದೂರು ರೋಟರಿ ಭವನದಲ್ಲಿ ನಡೆಯಿತು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಹಲವು ಮಹತ್ವಕಾಂಕ್ಷೆಯ ಯೋಜನೆಗಳು ಪ್ರತಿ ಮನೆ ಮನೆಗೆ ತಲುಪಿದೆ.ವಿಶ್ವಕರ್ಮ ಯೋಜನೆಯಡಿಯಲ್ಲಿ ಬೈಂದೂರು ಕ್ಷೇತ್ರದ ಒಂದು ಸಾವಿರ ಕುಟುಂಬಗಳಿಗೆ ಸವಲತ್ತು ಸಂದಿದೆ.ಮಾತ್ರವಂದನಾ ಕಾರ್ಯಕ್ರಮದ ಮೂಲಕ ಹತ್ತು ಸಾವಿರ ಹೆಣ್ಣು ಮಕ್ಕಳ ಖಾತೆಗೆ ಒಟ್ಟು 5.23 ಕೋಟಿ ಜಮೆ ಆಗಿದೆ.ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜಾಗಿದೆ.ಬೈಂದೂರು -ತೋಕೂರು ಕೊಂಕಣ ರೈಲ್ವೆ ದ್ವಿಪಥ ಮಾರ್ಗವಾಗಿ ಪರಿವರ್ತನೆಯಾಗಿ ಮುಂದಿನ ದಿನದಲ್ಲಿ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣ ಪ್ರಮುಖ ರೈಲ್ವೆ ನಿಲ್ದಾಣವಾಗಿ ಅಭಿವೃದ್ದಿಯಾಗಲಿದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಕೇಂದ್ರ ಸರಕಾರದ ಒಟ್ಟು 850 ಯೋಜನೆಗಳು ಸಮರ್ಪಕ ಸದ್ಬಳಕೆ ಕುರಿತು ಯೋಜನೆ ರೂಪಿಸಲಾಗಿದೆ ಎಂದರು.
ಕೃಷಿ ಅಧಿಕಾರಿ ಕಾರ್ಯವೈಖರಿಗೆ ಗರಂ: ಬೈಂದೂರು ಕ್ಷೇತ್ರದಲ್ಲಿ ಅತ್ಯಧಿಕ ಕೃಷಿಕರಿದ್ದಾರೆ.250 ರೈತರು ಕೇಂದ್ರದ ಯೋಜನೆಯ ಫಲಾನುಭವಿಗಳಿದ್ದರು ಸಹ ಯಾವುದೇ ಸಲಕರಣೆಗಳನ್ನು ನೀಡದೆ ಕಾಟಾಚಾರದ ಕಾರ್ಯಕ್ರಮಕ್ಕೆ ಮುಂದಾದ ಕೃಷಿ ಅಧಿಕಾರಿಯನ್ನು ಸಂಸದರು ಸ್ಥಳದಲ್ಲೆ ತರಾಟೆಗೆ ತೆಗೆದುಕೊಂಡರು ಹಾಗೂ ಮುಂದಿನ ವಾರ ಎಲ್ಲಾ ಫಲಾನುಭವಿಗಳನ್ನು ಕಛೇರಿಗೆ ಕರೆದು ಶಾಸಕರ ಮೂಲಕ ಸಲಕರಣೆಗಳನ್ನು ವಿತರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಲಕರಣೆ ವಿತರಿಸಿದರು ಹಾಗೂ ವಿವಿಧ ಭಾಗದ ಸಾರ್ವಜನಿಕರು ಸಂಸದರಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು




ಬೈಂದೂರು ತಹಸೀಲ್ದಾರ್ ರಾಮಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿ. ಡಿ. ಪಿ. ಓ ಉಮೇಶ್ ಟಿ.ಎಲ್, ಪಿ. ಎಮ್ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಇಂಜಿನಿಯರ್ ಯಶವಂತ, ಪಿ. ಎಮ್ ವಿಶ್ವಕರ್ಮ ಯೋಜನೆಯ ಮಹೇಶ್ ವಡೆಯರ್, ದಿಶಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಬೈಂದೂರು ತಾಲೂಕು ಕೃಷಿ ಇಲಾಖೆಯ ಅಧಿಕಾರಿ ಗಾಯತ್ರಿದೇವಿ ಜೆ, ಎನ್.ಆರ್.ಎಲ್.ಎಮ್ ನ ಪ್ರಶಾಂತ್ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ/ ಗಿರಿ ಶಿರೂರು