ಬೈಂದೂರು: ನಿರಂತರ ಮಳೆ ಬೈಂದೂರಿನ ಪಡುವರಿ ಗ್ರಾಮದ ಸೊಮೇಶ್ವರ ಬಳಿ ಬಾರಿ ಅವಘಡದ ಮುನ್ಸೂಚನೆ ನೀಡುತ್ತಿದೆ.ಇಲ್ಲಿನ ಸೊಮೇಶ್ವರ ಗುಡ್ಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ ಪರಿಣಾಮ ಗುಡ್ಡ ಇಬ್ಬಾಗವಾಗಿ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಕುಸಿಯುತ್ತಿದೆ.ನೀರಿನ ಅಬ್ಬರದ ಪರಿಣಾಮ ರಸ್ತೆಯಂಚಿನ ಮಣ್ಣು ಚರಂಡಿ ಹಾಗೂ ಸೊಮೇಶ್ವರ ದೊಂಬೆ ರಸ್ತೆಗೆ ಹರಿಯುತ್ತಿದ್ದು ಯಾವುದೆ ಕ್ಷಣದಲ್ಲೂ ಕುಸಿಯುವ ಸಾದ್ಯತೆ ಇದೆ.ಒಂದೊಮ್ಮೆ ಕುಸಿದರೆ ಬಾರಿ ಅಪಾಯ ಉಂಟಾಗುವ ಸಾದ್ಯತೆ ಇದೆ.
ಪಟ್ಟಣ ಪಂಚಾಯತ್ ನಿರ್ಲಕ್ಷ್ಯ ಅಪಾಯಕ್ಕೆ ಕಾರಣ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೈಂದೂರಿನ ವಿವಿಧ ಭಾಗದಲ್ಲಿ ಅಪಾರ ಹಾನಿಯಾಗಿದೆ.ಮಾತ್ರವಲ್ಲದೆ ಒತ್ತಿನೆಣೆ ಗುಡ್ಡ ಕೂಡ ಜರ್ಜರಿತವಾಗಿದೆ.ಹೆದ್ದಾರಿ ಪ್ರಾಧಿಕಾರ ಒಂದಿಷ್ಟು ಮುಂಜಾಗ್ರತೆ ವಹಿಸಿದೆ.ಆದರೆ ದೊಂಬೆ ರಸ್ತೆಯಲ್ಲಿರುವ ಸೊಮೇಶ್ವರ ಗುಡ್ಡದಲ್ಲಿ ಕಳೆದೆರಡು ವರ್ಷದಿಂದ ಖಾಸಗಿ ವ್ಯಕ್ತಿಯೊಬ್ಬರು ಗುಡ್ಡ ಕೊರೆದು ರಸ್ತೆ ನಿರ್ಮಿಸಿತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದೆ.ಶೇಡಿ ಮಣ್ಣಿನ ಈ ಗುಡ್ಡದಲ್ಲಿ ರಸ್ತೆ ನಿರ್ಮಿಸುವಾಗ ಬದಿಗಳನ್ನು ಕಟ್ಟಿಲ್ಲವಾಗಿದೆ ಇದರಿಂದ ಮಳೆಯಲ್ಲಿ ಗುಡ್ಡದ ತಳಪಾಯ ಕೊಚ್ಚಿಹೊಗಿದ್ದು ಮಣ್ಣು ಕುಸಿಯುತ್ತಿದೆ.ಮಳೆ ಮುಂದುವರಿದರೆ ಗುಡ್ಡ ಕುಸಿಯುವ ಸಾದ್ಯತೆ ಇದೆ ಆದರೆ ಇಲಾಖೆಯವರು ಮಾತ್ರ ಯಾವುದೆ ಮುನ್ನೆಚ್ಚರಿಕೆ ವಹಿಸಿಲ್ಲ ನಿತ್ಯ ಶಾಲಾ ವಾಹನ ಸೇರಿದಂತೆ ಹತ್ತಾರು ವಾಹನ ಸಂಚರಿಸುತ್ತಿದೆ.ಹಲವು ಬಾರಿ ಗಮನಕ್ಕೆ ತಂದರೂ ಕೂಡ ಪಟ್ಟಣ ಪಂಚಾಯತ್ ಗಮನಹರಿಸಿಲ್ಲ ಎನ್ನುವುದು ಸ್ಥಳೀಯರ ಅಬಿಪ್ರಾಯವಾಗಿದೆ. ಒಂದು ಸಣ್ಣ ಗೋಡೆ ಕಟ್ಟಲು ಸಾಮಾನ್ಯ ಜನರಿಗೆ ನೂರು ದಾಖಲೆ ಕೇಳುವ ಅಧಿಕಾರಿಗಳು ಗುಡ್ಡ ಕೊರೆದು ರಸ್ತೆ ನಿರ್ಮಿಸಲು ಅನುಮತಿ ಹೇಗೆ ನೀಡಿದರು.ಈ ಕುರಿತು ಎರಡು ವರ್ಷದಿಂದ ದೂರು ನೀಡಿದ್ದೇವೆ ಆದರೆ ಅಧಿಕಾರಿಗಳು ಮಾತ್ರ ಇಷ್ಟೊಂದು ಪರಿಸರ ನಾಶ ಮಾಡಿ ನೈಸರ್ಗಿಕ ಪರಿಸರದ ಸ್ವರೂಪ ಹಾಳುಗೆಡವಿದರು ಕೂಡ ಕ್ರಮ ಕೈಗೊಂಡಿಲ್ಲ.ಮಾತ್ರವಲ್ಲದೆ ಮುಖ್ಯ ರಸ್ತೆಯಿಂದ ಕನಿಷ್ಟ ಎಂಟು ಕಿ.ಮೀ. ಅಂತರ ವಿರಬೇಕೆಂಬ ನಿಯಮ ಇದೆ ಆದರೆ ಈ ರಸ್ತೆ ನಿರ್ಮಾಣಕ್ಕೆ ಕನಿಷ್ಟ ಮೂರು ಮೀಟರ್ ಕೂಡ ಇಲ್ಲ ಹಣವಂತರಿಗೆ ಒಂದು ನ್ಯಾಯ ಜನಸಾಮಾನ್ಯರಿಗೆ ಒಂದು ನ್ಯಾಯ ಮತ್ತು ಈ ಅಪಾಯಕ್ಕೆ ಪಟ್ಟಣ ಪಂಚಾಯತ್ ನೇರ ಹೊಣೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ
ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು; ಗುಡ್ಡ ಕುಸಿಯುತ್ತಿರುವ ಮಾಹಿತಿ ತಿಳಿದು ಕಂದಾಯ,ಆರಕ್ಷಕ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕಾಗಮಿಸಿದರು ಮತ್ತು ಕುಸಿಯುವ ಬೀತಿ ಇರುವುದರಿಂದ ದೊಂಬೆ ರಸ್ತೆ ಸಂಚಾರ ಬಂದ್ ಮಾಡಲು ಮುಂದಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಈಗ ಎಚ್ಚೆತ್ತುಕೊಂಡು ಮುಖ್ಯರಸ್ತೆ ಬಂದ್ ಮಾಡಿದರೆ ಸಾರ್ವಜನಿಕರು ನಿತ್ಯ ಸುತ್ತು ಬಳಸಿ ಬರಲು ಸಾದ್ಯವಿಲ್ಲ ಮೊದಲು ಗುಡ್ಡ ಕೊರೆದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು ಬಳಿಕ ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ಫಲಕ ಅಳವಡಿಸುವುದಾಗಿ ತಿಳಿಸಿದರು.


ಪ್ರಕರಣ ದಾಖಲಿಸುತ್ತೆವೆ:ಈ ಕುರಿತು ಪ್ರತಿಕ್ರಯಿಸಿದ ಪ.ಪಂ. ಅಧಿಕಾರಿ ನಾನು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸುತ್ತೆನೆ ಮಾತ್ರವಲ್ಲದೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅನುಮತಿ ರದ್ದುಪಡಿಸುವುದಾಗಿ ತಿಳಿಸಿದರು.
ಒಟ್ಟಾರೆಯಾಗಿ ಅಧಿಕಾರಿಗಳ ನಿಷ್ಕಾಳಜಿ,ಜನಪ್ರತಿನಿಧಿಗಳ ಹೊಂದಾಣಿಕೆ ಬೈಂದೂರು ವ್ಯಾಪ್ತಿಯಲ್ಲಿ ಇಂತಹ ಅನೇಕ ಅಪಾಯಗಳಿಗೆ ಕಾರಣವಾಗಿದೆ.ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ದೀಪಕ್,ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್,ಉಪ ವಲಯ ಅರಣ್ಯಾಧಿಕಾರಿ ಹರ್ಷ ವಿ,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್,ಗಸ್ತು ಅರಣ್ಯ ಪಾಲಕರಾದ ಶಂಕರ ಡಿ.ಎಲ್,ಮಂಜುನಾಥ ನಾಯ್ಕ ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು