ಬೈಂದೂರು,ಸೆ.11: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ನಬಾರ್ಡ್‌ನ ಸಹಯೋಗದಲ್ಲಿ ಗ್ರಾಹಕರಿಗಾಗಿ ಆರ್ಥಿಕ ಅರಿವು ಕಾರ್ಯಕ್ರಮ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಿರೂರು ಶಾಖೆಯಲ್ಲಿ ನಡೆಯಿತು.

ಕೆನರಾ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಸಿಬ್ಬಂದಿ ಹಾಗೂ ಸಂಪನ್ಮೂಲ ವ್ಯಕ್ತಿ ಆಶಾಲತಾ ಕಾರ್ಯಕ್ರಮ ಉದ್ಘಾಟಿಸಿ ಹಣದ ಉಳಿತಾಯವೇ ಉತ್ತಮ ಆರ್ಥಿಕ ಭದ್ರತೆಯ ಮೊದಲ ಹೆಜ್ಜೆಯಾಗಿದೆ.ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.ಬ್ಯಾಂಕ್ ವ್ಯವಹಾರಗಳಲ್ಲಿ ಸುರಕ್ಷತೆ ಮತ್ತು ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕಾಗಿದೆ.OTP, PIN, ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.ಯಾವುದೇ ಹೂಡಿಕೆ ಮಾಡುವ ಮೊದಲು ಅದರ ಅಪಾಯ ಮತ್ತು ಲಾಭವನ್ನು ತಿಳಿದುಕೊಳ್ಳಿ.ಸಾಲ ಪಡೆಯುವ ಮೊದಲು ಬಡ್ಡಿದರ ಮತ್ತು ಮರುಪಾವತಿ ಷರತ್ತುಗಳನ್ನು ಪರಿಶೀಲಿಸಿ.ವಿಮೆ ಮತ್ತು ಉಳಿತಾಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.ಆನ್‌ಲೈನ್ ವಂಚನೆಗಳಿಂದ ಎಚ್ಚರವಾಗಿರಿ ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬೇಡಿ.ಹಣಕಾಸಿನ ದಾಖಲೆಗಳು ಮತ್ತು ವ್ಯವಹಾರದ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಹಾಗೂ ಆರ್ಥಿಕ ಅರಿವು ಹೆಚ್ಚಿದಂತೆ ಕುಟುಂಬದ ಮತ್ತು ಸಮಾಜದ ಆರ್ಥಿಕ ಭದ್ರತೆ ಹೆಚ್ಚುತ್ತದೆ ಎಂದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ,ಶಾಖಾ ನಿರೀಕ್ಷಕ ರಾಘವೇಂದ್ರ ಉಡುಪ,ಕೇಂದ್ರ ಕಛೇರಿ ಐ.ಟಿ ವಿಭಾಗದ ಅಧಿಕಾರಿ ಮಹೇಶ್ ಮೊಗೇರ್,ಬೈಂದೂರು ಶಾಖಾ ವ್ಯವಸ್ಥಾಪಕ ಸತೀಶ ಶೆಟ್ಟಿ,ಕುಂದಾಪುರ ತಾಲೂಕು ವಲಯ ಮೇಲ್ವಿಚಾರಕ ಸಂದೀಪ ಕುಮಾರ್,ಕಟ್ಟಡದ ಮಾಲಕ ಬಾಲಚಂದ್ರ ಪ್ರಭು,ನವೋದಯ ಪ್ರೇರಕಿ ವೀರಮ್ಮ,ಗ್ರಾಹಕರು,ಸಿಬ್ಬಂದಿಗಳು ಹಾಗೂ ನವೋದಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಶಿರೂರು ಶಾಖಾ ವ್ಯವಸ್ಥಾಪಕಿ ನೀತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಖೆಯ ಸಿಬಂದಿ ನಾಗರಾಜ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.ಶಾಖೆಯ ಸಿಬ್ಬಂದಿ ದೇವೇಂದ್ರ ಮೊಗೇರ್ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

one × four =