ಬೈಂದೂರು: ಬೈಂದೂರು ರಾಜಕೀಯ ವಲಯದಲ್ಲಿ ಬಾರಿ ಸಂಚಲನದ ಸುದ್ದಿ ಹೊರಬಿದ್ದಿದೆ.ಕಳೆದ 13 ವರ್ಷಗಳಿಂದ ಬೈಂದೂರಿನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ರೈತ ಪರ ಹೋರಾಟಗಾರ ದೀಪಕ್ ಕುಮಾರ್ ಶೆಟ್ಟಿ ಯವರನ್ನು ಪಕ್ಷದಿಂದ 6 ವರ್ಷದ ಅವಧಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ಈ ನಿಲುವು ಬಿಜೆಪಿ ಕಾರ್ಯಕರ್ತ ವಲಯದಲ್ಲಿ ಬಾರಿ ಸಂಚಲನ ಉಂಟು ಮಾಡಿದ್ದು ದೀಪಕ್ ಕುಮಾರ್ ಶೆಟ್ಟಿ ಅಭಿಮಾನಿಗಳಿಗೆ ಬಾರಿ ಅಸಾಮಾಧಾನ ಉಂಟಾಗಿದೆ.
ರೈತರ ಪರ ನಿಂತಿದ್ದೆ ಮುಳುವಾಯಿತೆ?; ದೀಪಕ್ ಕುಮಾರ್ ಶೆಟ್ಟಿ ಉಚ್ಚಾಟನೆಗೆ ಪ್ರಮುಖ ಕಾರಣ ಬೈಂದೂರು ಶಾಸಕರು ಮತ್ತು ಇವರ ನಡುವಿನ ಆಂತರಿಕ ಸಮರವಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಪಕ್ಷದ ಅಧೀಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತು, ಎಕತೆ ಹಾನಿಯಾಗಿರುವ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ.ಇದಕ್ಕೆ ಬಹುಮುಖ್ಯ ಕಾರಣ ದೀಪಕ್ ಕುಮಾರ್ ಶೆಟ್ಟಿಯವರು ಗ್ರಾಮೀಣ ಭಾಗದ ರೈತರಿಗೆ ನ್ಯಾಯ ಓದಗಿಸಲು ಹೋರಾಟ ಆರಂಭಿಸಿ ಅನಿಧಿ೯ಷ್ಟಾವಧಿ ಧರಣಿ ಆರಂಭಿಸಿರುವುದು ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಮಾತ್ರವಲ್ಲದೆ ಕಳೆದ ಒಂದು ವರ್ಷದಿಂದ ಶಾಸಕರು ಮತ್ತು ದೀಪಕ್ ಕುಮಾರ್ ಶೆಟ್ಟಿ ಯವರ ನಡುವಿನ ತೆರೆಮರೆಯ ಸೆಣಸಾಟ ಗುಟ್ಟಾಗಿ ಉಳಿದಿರಲಿಲ್ಲ.ಮರಳು ದಂಧೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಬಳಿ ಒಪ್ಪಂದದ ಹೊಂದಾಣಿಕೆ ಕುರಿತು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.ಹೀಗಾಗಿ ರೈತ ಹೋರಾಟಕ್ಕೆ ಹಿನ್ನೆಡೆ ಮಾಡಬೇಕೆನ್ನುವ ಮೂಲ ಉದ್ದೇಶದಿಂದ ಇಷ್ಟೆಲ್ಲಾ ಪ್ರಯತ್ನ ನಡೆದಿದೆ ಎನ್ನುವುದು ದೀಪಕ್ ಕುಮಾರ್ ಶೆಟ್ಟಿ ಯವರ ಬೆಂಬಲಿಗರ ಅಭಿಪ್ರಾಯವಾಗಿದೆ.
ದೀಪಕ್ ಕುಮಾರ್ ಶೆಟ್ಟಿ ರಾಜಕೀಯ ಹಿನ್ನೆಲೆ: ದೀಪಕ್ ಕುಮಾರ್ ಶೆಟ್ಟಿ ಯವರು ಕಾಲೇಜು ದಿನಗಳಿಂದ ಹೋರಾಟ ಮತ್ತು ಸಂಘಟನೆ ಸಾಮರ್ಥ್ಯದಿಂದ ಬೆಳೆದು ಬಂದವರು.ಜನಪರ ವಿಚಾರದಲ್ಲಿ ನೇರ, ನಿಷ್ಟುರ ವ್ಯಕ್ತಿತ್ವದವರು.1985 ರಲ್ಲಿ ಅಪ್ಪಣ್ಣ ಹೆಗ್ಡೆ ಯವರ ನೇತ್ರತ್ವದಲ್ಲಿ ಜನತಾದಳ ಪಕ್ಷದ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ತಾ.ಪಂ ಸದಸ್ಯರಾಗಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ 13 ವರ್ಷ ಸಕ್ರೀಯರಾಗಿದ್ದರು.ಇವರ ಪತ್ನಿ ಕೂಡ 2 ಬಾರಿ ಜಿ.ಪಂ ಸದಸ್ಯರಾಗಿದ್ದರು.ಬೈಂದೂರು ಗ್ರಾ.ಪಂ ಉಪಾಧ್ಯಕ್ಷರಾಗಿ,ಬೈ,ವ್ಯ.ಸೇ.ಸಹಕಾರಿ ಸಂಘದ ನಿರ್ದೇಶಕರಾಗಿದ್ದರು. 2014 ರಲ್ಲಿ ಯಡ್ಯೂರಪ್ಪ ನೇತ್ರತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾಗಿ ಎರಡು ವರ್ಷ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಲ್ಕುವರೆ ವರ್ಷ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಐದೂವರೆ ವರ್ಷ ಜವಬ್ದಾರಿ ವಹಿಸಿಕೊಂಡಿದ್ದು ತಳಮಟ್ಟದಲ್ಲಿ ಮತ್ತು ಕಾಂಗ್ರೆಸ್ ಭದ್ರಕೋಟೆಯಾದ ಗ್ರಾಮೀಣ ಭಾಗದಲ್ಲಿ ಬಿಜೆಪಿಯನ್ನು ಬೆಳೆಸಿರುವುದು ದೀಪಕ್ ಕುಮಾರ್ ಶೆಟ್ಟಿ ಯವರ ಸಂಘಟನಾ ಸಾಮರ್ಥ್ಯವಾಗಿದೆ.


ಹೇಳಿಕೆ.1
ನನ್ನನ್ನು ಅಮಾನತು ಮಾಡುವ ಅಧಿಕಾರ ಮಂಡಲದ ಅಧ್ಯಕ್ಷರಿಗಿಲ್ಲಾ.ಪಕ್ಷದ ನಿಯಮ ಈ ವಿಷಯದಲ್ಲಿ ಪಾಲನೆಯಾಗಿಲ್ಲ.ಶಾಸಕರ ಕುಮ್ಮಕ್ಕಿನಿಂದ ಈ ಉಚ್ಚಾಟನೆ ಪ್ರಕ್ರಿಯೆ ನಡೆದಿದೆ.ನನ್ನನ್ನು ಬಿಜೆಪಿಯಿಂದ ಹೊರದಬ್ಬಲು ಯಾರಿಂದಲೂ ಸಾದ್ಯವಿಲ್ಲ. ಈ ಉಚ್ಚಾಟನೆಗೆ ಯಾವುದೇ ಬೆಲೆಯಿಲ್ಲ. ಇದರ ಹಿಂದಿನ ರೂವಾರಿಗಳ ಬಣ್ಣ ಸದ್ಯದಲ್ಲೆ ಬಯಲಾಗಲಿದೆ.ನಮ್ಮ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ………………ದೀಪಕ್ ಕುಮಾರ್ ಶೆಟ್ಟಿ
ಹೇಳಿಕೆ.2
ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ತೀರ್ಮಾನದಂತೆ ಪಕ್ಷ ವಿರೋಧಿ ಮತ್ತು ಶಿಸ್ತಿಗೆ ವಿರುದ್ದವಾಗಿ ನಡೆದುಕೊಂಡ ಪರಿಣಾಮ ಪಕ್ಷದ ನಿಯಮದಂತೆ ಉಚ್ಚಾಟನೆ ಮಾಡಲಾಗಿದೆ.ಇದು ಪಕ್ಷದ ತೀರ್ಮಾನವಾಗಿದೆ………..ಅನಿತಾ ಆರ್.ಕೆ ಅಧ್ಯಕ್ಷರು ಬೈಂದೂರು ಬಿಜೆಪಿ ಮಂಡಲ