ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.ಮಂಗಳವಾರ ಗಂಗನಾಡು ಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಹಳ್ಳಿ ಹಾಡು, ಸ್ಥಳದಲ್ಲೆ ಬುಟ್ಟಿ ನೇಯ್ದು ಪ್ರತಿಭಟನೆ: ಗಂಗನಾಡು ಭಾಗದ ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸ್ಥಳದಲ್ಲೆ ಬುಟ್ಟಿ ನೇಯ್ದು ರೈತರನ್ನು ಪಟ್ಟಣ ಪಂಚಾಯತ್ ಸಂಕಷ್ಟದಿಂದ ಮುಕ್ತಿ ನೀಡಬೇಕೆನ್ನುವ ಸಂದೇಶ ನೀಡಿದರು.ಬಳಿಕ ಹಳ್ಳಿ ಹಾಡುಗಳು, ಗ್ರಾಮೀಣ ಪದ್ದತಿಯ ಆಚರಣೆ ನೃತ್ಯಗಳನ್ನು ನಡೆಸಿ ಪ್ರತಿಭಟನೆ ನಡೆಸಿದರು.
ಹೋರಾಟ ಸಮಿತಿಯ ಅರುಣ್ ಕುಮಾರ್ ಶಿರೂರು ಮಾತನಾಡಿ ಗ್ರಾಮೀಣ ಭಾಗದ ಜನರ ಭಾವನೆಗಳೊಂದಿಗೆ ಆಟ ಆಡುವುದು ಸರಿಯಲ್ಲ. ಪಟ್ಟಣ ಪಂಚಾಯತ್ನಿಂದ ಕೇವಲ ಗ್ರಾಮೀಣ ಭಾಗ ಮಾತ್ರವಲ್ಲ ಸುತ್ತಲಿನ 03 ಕಿ.ಮೀ ವರೆಗೂ ಕೂಡ ಕಠಿಣ ನಿಯಮ ಅವಲಂಬನೆ ಆಗುತ್ತದೆ.ರಾಜಕೀಯ ರಹಿತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ಈ ಹಳ್ಳಿ ಜನರ ಬೇಡಿಕೆಗೆ ಗೌರವಕೊಟ್ಟು ನಾಯಕರು ಮತ್ತು ಅಧಿಕಾರಿಗಳು ಸಮರ್ಪಕ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.





ಬೈಂದೂರು ತಾಲೂಕು ಆಡಳಿತದ ಕಛೇರಿ ಎದುರು ರೈತರು ಅಡುಗೆ ಸಿದ್ದಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗಂಗನಾಡು ಭಾಗದ ಸುಭಾಷ್ ಶೇರುಗಾರ್,ಗಣಪ ಮರಾಠಿ,ಲಿಮೋನ್ ಅತ್ಯಾಡಿ,ವಾಸುದೇವ ಮರಾಠಿ ಹೊಸೂರು ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು