ಬೈಂದೂರು: ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಲಾವಣ್ಯ ಸಂಸ್ಥೆ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ.ಪ್ರಬುದ್ದ ಕಲಾವಿದರ ತಂಡವಾಗಿರುವ ಲಾವಣ್ಯ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಮಹೋನ್ನತವಾದ ಸಾಧನೆಯಾಗಿದೆ.ಆಧುನಿಕತೆಯ ಬದಲಾವಣೆಗಳೊಂದಿಗೆ ರಂಗಭೂಮಿ ತನ್ನ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನೆಡೆಯಬೇಕಾಗಿದೆ.ಪ್ರತಿಯೊಂದು ಅಭಿನಯದ ಜೊತೆಗೆ ಬದಲಾವಣೆಗೆ ಒಗ್ಗಿಕೊಂಡು ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಲಾವಣ್ಯದ ಹೆಗ್ಗಳಿಕೆಯಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಬುಧವಾರ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯ (ರಿ.)ಬೈಂದೂರು ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ಇದರ 48ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2025 ರಂಗೋತ್ಸವ ಇದರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಈ ಮಾತುಗಳನ್ನಾಡಿದರು.
ಖ.ರೈ.ಸೇ.ಸಂಘ ಉಪ್ಪುಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ,ಉದ್ಯಮಿ ಶ್ರೀಧರ ಪೂಜಾರಿ ಮುಂಬೈ,ಕ.ರಾ.ಸ.ಶಿ.ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ,ಬೈಂದೂರು ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಗಿರೀಶ್ ಶ್ಯಾನುಭಾಗ್,ಡಾ.ಬಿ.ಆರ್.ಆಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಭಾಸ್ಕರ,ಹಿನ್ನೆಲೆ ರಂಗ ಕಲಾವಿದ ಯು.ರಾಜ್ಗೋಪಾಲ ವೈದ್ಯ ಬೈಂದೂರು, ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಭಾಗವತ ಅಣ್ಣಪ್ಪ ದೇವಾಡಿಗ ಬಿಜೂರು,ಸಂಗೀತ ನಿರ್ದೇಶಕ ಗೀತಂ ಗಿರೀಶ್,ಗಾಯಕಿ ಪೂರ್ಣಿಮಾ ವಿ.ಪೈ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಹಿರಿಯ ರಂಗ ಕಲಾವಿದ ಗಣೇಶ ಕಾರಂತ್ ಬೈಂದೂರು ರವರನ್ನು ಸಮ್ಮಾನಿಸಲಾಯಿತು.
ರಂಗ ನಿರ್ದೇಶಕ ಡಾ.ಶ್ರೀಪಾದ್ ಭಟ್ ಉಡುಪಿ ಶುಭಾಶಂಸನೆಗೈದರು.ಮಾಜಿ ಅಧ್ಯಕ್ಷ ಗಣಪತಿ ಎಸ್.ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಚೈತ್ರಾ ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು.ಉದಯ ಆಚಾರ್ಯ ಬೈಂದೂರು ವಂದಿಸಿದರು.