ಬೈಂದೂರು: ಶಾಸಕರು ತಮ್ಮ ಪಕ್ಷದ ಕಛೇರಿಯಲ್ಲಿ ಅಽಕಾರಿಗಳ ಸಭೆ ನಡೆಸಿರುವುದು ಸಮಂಜಸವಲ್ಲ ಎಂದು ಕೆ.ಡಿ.ಪಿ ಸದಸ್ಯರು ಪ್ರಸ್ತಾಪಿಸಿದ ವಿಷಯ ತಾರಕಕ್ಕೇರಿ ಪರಸ್ಪರ ಮಾತಿನ ಚಕಮಕಿ ನಡೆದು ಹಕ್ಕುಚ್ಯುತಿ ಆಗ್ರಹಿಸಿ ಶಾಸಕರು ಸಭೆಯಿಂದ ನಿರ್ಗಮಿಸಿರುವುದು ಬುಧವಾರ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ನಡೆದಿದೆ.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತ್ರತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಿಗಧಿಯಾಗಿತ್ತು.ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು ತ್ರಾಸಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸುವ ಬಗ್ಗೆ ನಿವೇಶನ ಗುರುತಿಸಲು ಈಗಾಗಲೇ ಸೂಚಿಸಲಾಗಿದೆ. ಅವರ ಪ್ರಗತಿಯ ಬಗ್ಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಿವೇಶನ ರಹಿತರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಕಾನೂನು ತೊಡಕು ಇಲ್ಲದ ನಿವೇಶನವನ್ನು ಶೀಘ್ರವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಸೂಚಿಸಿದರು. ಪ್ರತಿ ಗುರುವಾರ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಕಡತದ ವಿಲೇವಾರಿ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕರು ಹಾಗೂ ಕೆ.ಡಿ.ಪಿ ಸದಸ್ಯರ ನಡುವೆ ಜಟಾಪಟಿ: ನೂತನ ನಾಮನಿರ್ದೇಶಿತ ಕೆ.ಡಿ.ಪಿ ಸದಸ್ಯರಾದ ಜಗದೀಶ ದೇವಾಡಿಗ,ಶೇಖರ ಪೂಜಾರಿ ಉಪ್ಪುಂದ ಹಾಗೂ ನರಸಿಂಹ ಹಳಗೇರಿ ಶಾಸಕರನ್ನು ಉದ್ದೇಶಿಸಿ ಮಾತನಾಡಿ ಬೈಂದೂರು ಶಾಸಕರು ಅಧಿಕಾರಿಗಳನ್ನು ತಮ್ಮ ಖಾಸಗಿ ಕಛೇರಿಯಲ್ಲಿ ಅಧಿಕೃತ ಸಭೆ ಕರೆಯುವುದು ಸಮಂಜಸವಲ್ಲ ಮತ್ತು ಇದರಿಂದ ಜನಸಾಮಾನ್ಯರಿಗೆ ನ್ಯಾಯ ದೊರಕುವುದಿಲ್ಲ ಎಂದರು.ಇದಕ್ಕೆ ಉತ್ತರಿಸಿದ ಶಾಸಕರು ಇದು ಕೆಡಿಪಿ ಸಭೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಮೂಲಕ ಕ್ಷೇತ್ರದ ಅಭಿವೃದ್ದಿ ಕುರಿತು ಚರ್ಚೆ ಮಾಡಬೇಕು.ರಾಜಕೀಯ ಉದ್ದೇಶದಿಂದ ಕೆಡಿಪಿ ಸಭೆಯಲ್ಲಿ ಅನಗತ್ಯ ಚರ್ಚೆ ಮಾಡುವುದು ಶಾಸಕರ ಹಕ್ಕುಚ್ಯುತಿಯಾದಂತೆ ಹೀಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಅನುಮತಿ ಮೂಲಕ ಚರ್ಚೆ ನಡೆಯಬೇಕು ಎಂದರು.ಈ ವಿಷಯಗಳು ಪರಸ್ಪರ ವಾದ ವಿವಾದದ ಚರ್ಚೆ ತಾರಕಕ್ಕೇರಿಸಿತು ಮತ್ತು ಶಾಸಕರು ಕೆಡಿಪಿ ಸಭೆಯಲ್ಲಿ ರಾಜಕೀಯ ದುರುದ್ದೇಶದಿಂದ ಚರ್ಚೆಗೆ ಎಳೆಯಲಾಗುತ್ತಿದೆ ಎಂದು ಹಕ್ಕುಚ್ಯುತಿ ಪ್ರಸ್ತಾಪಿಸಿ ಸಭೆಯಿಂದ ಹೊರನಡೆದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಒಟ್ಟು ಕಾಂಗ್ರೆಸ್ ಪಕ್ಷ ಹಠಕ್ಕೆ ಬಿದ್ದಂತಿದೆ.ಯಾವುದೇ ಕಾರಣಕ್ಕೂ ಶಾಸಕರಿಗೆ ಸಭೆ ನಡೆಸಲು ಬಿಡಬಾರದೆಂದು ನಿರ್ಧರಿಸಿದಂತಿದೆ.ಧರಣಿ ವೇಳೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಮಾಡಬಾರದಾಗಿ ಎಲ್ಲೂ ಹೇಳಿಲ್ಲ.ಒಂದೊಮ್ಮೆ ನನ್ನಿಂದ ತಪ್ಪಾದರೆ ಅದಕ್ಕೆ ಹಿಂಬರಹ ನೀಡಬೇಕೆಂದು ಕೇಳಿದ್ದೇನೆ.ಆದರೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ವರದಿ ಪಡೆಯಬೇಕಾಗಿರುವುದು ನಿಯಮ ಆದರೆ ಕಾಂಗ್ರೆಸ್ ಪಕ್ಷದ ಕೆಡಿಪಿ ಸದಸ್ಯರ ಇಂತಹ ವರ್ತನೆ ಬೈಂದೂರಿನ ಅಭಿವೃದ್ದಿಯನ್ನು ಕುಂಠಿತಗೊಳಿಸುವ ಪ್ರಯತ್ನ ಎಂದರು.
ಕೆ.ಡಿ.ಪಿ ಸದಸ್ಯ ಶೇಖರ ಪೂಜಾರಿ ಮಾತನಾಡಿ ನಾವು ಸಭೆಯಲ್ಲಿ ಶಾಸಕರೊಂದಿಗೆ ಗೌರವದಿಂದಲೆ ವರ್ತಿಸಿದ್ದೇವೆ.ಜಿಲ್ಲಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ ಬಳಿಕವೂ ಶಾಸಕರು ಪ್ರಭಾವ ಬಳಸಿ ಅಧಿಕಾರಿಗಳನ್ನು ಪಕ್ಷದ ಕಛೇರಿಯಲ್ಲಿ ಕರೆದು ಸಭೆ ನಡೆಸಿದರ ಕುರಿತು ಪ್ರಶ್ನಿಸಿದ್ದೇವೆ.ನಾವು ಕೂಡ ಸರಕಾರದಿಂದ ನಿಯುಕ್ತಿಗೊಂಡ ನಾಮನಿರ್ದೇಶಿತ ಸದಸ್ಯರಾಗಿದ್ದೇವೆ.ಶಾಸಕರು ಏಕಾಏಕಿ ಹಾರಟ ನಡೆಸಿರುವುದು ನಮ್ಮ ಅಧಿಕಾರದ ಹಕ್ಕು ಚ್ಯುತಿಯಾದಂತೆ.ಹೀಗಾಗಿ ಶಾಸಕರು ಗೌರವ ಮತ್ತು ತಾಳ್ಮೆಯಿಂದ ಶಾಸಕರು ವರ್ತಿಸಬೇಕು.ಕೆಡಿಪಿ ಸಭೆ ಸಂಪೂರ್ಣಗೊಂಡಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಆಡಳಿತಾಧಿಕಾರಿ ಪ್ರದೀಪ್ ಆರ್,ತಾ.ಪಂ ಆಡಳಿತ ಅಧಿಕಾರಿ ಅನಿತಾ,ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಹಾಜರಿದ್ದರು.
ವರದಿ/ ಗಿರಿ ಶಿರೂರು