ಬೈಂದೂರು: ಶಾಸಕರ ಪರಿಕಲ್ಪನೆಯ ಬೈಂದೂರು ಉತ್ಸವದ ಅಂಗವಾಗಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿಯೂ ಕೂಡ ಗ್ರಾಮೋತ್ಸವ ಆಯೋಜಿಸಿದ್ದು, ಇದರ ಮೂಲಕ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಮತ್ತು ಅನುಕೂಲಗಳನ್ನು ನೇರವಾಗಿ ಪಡೆಯುವ ಅವಕಾಶ ದೊರಕಿದಂತಾಗಿದೆ. ಈ ಉತ್ಸವ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಹಾಗೂ ಈ ಉತ್ಸವಗಳು ಮನೋರಂಜನೆಯ ಜೊತೆಗೆ ಬೈಂದೂರು ಅಭಿವೃದ್ಧಿಗೆ ಮುನ್ನುಡಿಯಾಗಲಿ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳೀದಾರ್ ಹೇಳಿದರು.

ಪಡುವರಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮೆಸ್ಕಾಂ, ಆಯುರ್ವೇದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆ ಹಾಗೂ ಕ್ಲೀನ್ ಕಿನಾರಾ ಸಹಭಾಗಿತ್ವದಲ್ಲಿ ಸೋಮವಾರ ಕೋಟೆಬಾಗಿಲು ಸಹಿಪ್ರಾ ಶಾಲಾ ಆವರಣದಲ್ಲಿ ನಡೆದ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು.

ಬೈಂದೂರು ಪ.ಪಂ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ ಅಧ್ಯಕ್ಷತೆ ವಹಿಸಿದ್ದರು.ಉಪ ತಹಶೀಲ್ದಾರ್ ಲತಾ ಶೆಟ್ಟಿ, ಟಿಎಚ್‌ಒ ಡಾ, ಪ್ರೇಮಾನಂದ, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಡಾ. ನವನೀತ್ ಭಟ್, ಪಶು ವೈದ್ಯಾಧಿಕಾರಿ ಡಾ.ಅರುಣ ಕುಮಾರ್ ವೈ. ಕೆ., ಆಯೂಷ್ ವೈದ್ಯಾಧಿಕಾರಿ ಡಾ. ನಾಗರಾಜ ಕವಲಗಿ, ಮೆಸ್ಕಾಂ ಎಡಬ್ಲೂ ಹರೀಶ ಕುಮಾರ್, ಅರಣ್ಯಾಧಿಕಾರಿ ಹರ್ಷವರ್ಧನ್, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆ ಪಿಆರ್‌ಒ ಶಂಕರ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಕ್ಲೀನ್ ಕಿನಾರ ಸಂಯೋಜಕ ರಾಘವೇಂದ್ರ ಸುರಭಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸುಧಾ ಕೆ., ಸೋಮೇಶ್ವರ ದೇವಳದ ಧರ್ಮದರ್ಶಿ ಪರಮೇಶ್ವರ ಪಟ್ವಾಲ್, ಮುಖ್ಯಶಿಕ್ಷಕಿ ಸಾವಿತ್ರಿ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಕೃಷ್ಣ ಸಿ., ಗ್ರಾಪಂ ಮಾಜಿ ಸದಸ್ಯ ಸೀತಾರಾಮ ಶೆಟ್ಟಿ, ಉದ್ಯಮಿ ನಾಗರಾಜ ತಾಂಡೇಲ ಉಪಸ್ಥಿತರಿದ್ದರು.

ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗುರುರಾಜ ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ರಮಣ ವಂದಿಸಿದರು.

ಮಂಗಳೂರು ಕೆ. ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರು ಚರ್ಮರೋಗ, ಮೂಳೆ ಮತ್ತು ಜನರಲ್ ಮೆಡಿಸನ್ ಚಿಕಿತ್ಸೆ, ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸಿದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಂದ ಸಿಗುವ ಸವಲತ್ತು, ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

seven + 16 =