ಬೈಂದೂರು,ಜ.12: ಪ್ರತಿ ಗ್ರಾಮದಲ್ಲೂ ಸಮಸ್ಯೆಗಳನ್ನು ಆಲಿಸುವ ಜವಬ್ದಾರಿ ಗ್ರಾ.ಪಂ ಸದಸ್ಯರದ್ದಾಗಿರುತ್ತದೆ.ಚುನಾಯಿತ ಸದಸ್ಯರ ಬೇಡಿಕೆಗೆ ಧ್ವನಿಯಾಗುವುದು ವಿಧಾನಪರಿಷತ್ ಸದಸ್ಯರ ಜವಬ್ದಾರಿಯಾಗಿದೆ.ಕೇವಲ ಅನುದಾನ ಹಂಚಿಕೆ ಸವಲತ್ತುಗಳ ವಿತರಣೆ ಮಾತ್ರವಲ್ಲದೆ ನಾವು ಪ್ರತಿನಿಧಿಸುವ ಪಂಚಾಯತ್ಗಳ ಆದಾಯ ಹೆಚ್ಚಿಸುವ, ಆಸ್ತಿ ವೃದ್ದಿಸುವ ಜವಬ್ದಾರಿ ಕೂಡ ಗ್ರಾ.ಪಂ ಸದಸ್ಯರದ್ದು ಮತ್ತು ಅಧಿಕಾರಿಗಳದ್ದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು ಅವರು ಶಿರೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಅಧ್ಯಕ್ಷರು,ಉಪಾಧ್ಯಕ್ಷ ಗ್ರಾ.ಪಂ ಸದಸ್ಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಒಟ್ಟು 380 ಗ್ರಾಮ ಪಂಚಾಯತ್ಗಳ ವಿಧಾನಪರಿಷತ್ ಸದಸ್ಯರ ವ್ಯಾಪ್ತಿಗೆ ಒಳಪಡುತ್ತದೆ.ಸದಸ್ಯರ ಸಲಹೆಗಳನ್ನು ಸರಕಾರಕ್ಕೆ ಮುಟ್ಟಿಸುವ ಜೊತೆಗೆ ಜನರ ಕಷ್ಟಸುಖಃಗಳಿಗೆ ಆದ್ಯತೆ ನೀಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಪೂರಕವಾದ ಯೋಜನೆಗಳನ್ನು ಇಲಾಖೆ ಮತ್ತು ಸರಕಾರದ ಮಟ್ಟದಲ್ಲಿ ಮಂಜೂರಾತಿ ಪ್ರಯತ್ನಗಳಿದ್ದರೆ ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.ಶಿರೂರು ಅತೀ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿದ್ದು ಅಭಿವೃದ್ದಿ ದೃಷ್ಟಿಯಿಂದ ವಿನೂತನವಾದ ಚಿಂತನೆಗಳ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್ಮಹ್ಮದ್,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ,ಭೂ ನ್ಯಾಯ ಮಂಡಳಿ ಸದಸ್ಯ ಉದಯ ಪೂಜಾರಿ,ಶೇಖರ ಪೂಜಾರಿ ಉಪ್ಪುಂದ,ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.



ಗ್ರಾ.ಪಂ ಸದಸ್ಯ ರವೀಂದ್ರ ಶೆಟ್ಟಿ ಪಟೇಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಗ್ರಾ.ಪಂ ಸಿಬ್ಬಂದಿ ಶಂಕರ ಬಿಲ್ಲವ ವಂದಿಸಿದರು.
ವರದಿ/ಗಿರಿ ಶಿರೂರು