ಉಪ್ಪುಂದ; ಸಮಯಕ್ಕೆ ಸರಿಯಾಗಿ ಸಭೆಗಳನ್ನು ನಡೆಸದೆ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡಿ ಸಾರ್ವಜನಿಕ ವಿರೋಽ ಧೋರಣೆ ಅನುಸರಿಸುತ್ತಿದೆ ಎಂದು ಉಪ್ಪುಂದ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಸೆ.02 ರಂದು ಪ್ರತಿಭಟನೆ ನಡೆಯಿತು.ಕಾಂಗ್ರಸ್ ಮುಖಂಡ ಮಂದನ್ ಕುಮಾರ್ ಮಾತನಾಡಿ, ಸ್ಥಳೀಯಾಡಳಿತವು ಸರಿಯಾಗಿ ಸಭೆಗಳನ್ನು ನಡೆಸದ ಕಾರಣ ಸಾರ್ವಜನಿಕರ ತೀರಾ ಅವಶ್ಯ ಇರುವ ಹಲವಾರು ಅರ್ಜಿಗಳು ವಿಲೇವಾರಿಯಾಗದೇ ತೊಂದರೆಯಾಗುತ್ತಿದೆ ಎಂದರು.
ಜನ ಸ್ನೇಹಿ ಆಡಳಿತ ನೀಡಿ; ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಸಭೆಗಳನ್ನು ನಡೆಸಿ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಉಪ್ಪುಂದ ಗ್ರಾಮಸ್ಥರು ಹಾಗೂ ಸಾರ್ವಜನಿಕ ಸ್ನೇಹಿ ಆಡಳಿತ ನೀಡುವಂತೆ ಎಚ್ಚರಿಕೆ ನೀಡಿದರು.
ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ; ಇದು ಪುನರಾವರ್ತನೆಗೊಂಡಲ್ಲಿ ಸಾರ್ವಜನಿಕರ ಸಹಯೋಗದೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.
ಗ್ರಾಮೀಣ ಕಾಂಗ್ರಸ್ ಅಧ್ಯಕ್ಷ ತಿಮ್ಮಪ್ಪ ಖಾರ್ವಿ, ತಾ| ಪಂ. ಮಾಜಿ ಸದಸ್ಯೆ ಪ್ರಮೀಳಾ ದೇವಾಡಿಗ, ಉಪ್ಪುಂದ ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರಾದ ಶೇಖರ್ ಪೂಜಾರಿ , ಬಾಬು ದೇವಾಡಿಗ, ಮಾಜಿ ಸದಸ್ಯರಾದ ವಾಸುದೇವ ಪೂಜಾರಿ, ನಾಗರಾಜ ಉಪ್ಪುಂದ, ಮುಖಂಡರಾದ ವೆಂಕಟರಮಣ ಖಾರ್ವಿ, ನಾಗೇಶ ಖಾರ್ವಿ ,ಗಣಪತಿ ಖಾರ್ವಿ , ವಾಸು ಮೊಗವೀರ, ನಾರಾಯಣ ಆಚಾರ್ಯ, ಭಾಸ್ಕರ್ ಖಾರ್ವಿ, ರಾಮ ಬಬ್ರಿಮನೆ , ಮೋಹನ ಖಾರ್ವಿ, ನಾಗೇಶ್, ಹರಿಶ್ಚಂದ್ರ, ವಸಂತ ಪೂಜಾರಿ, ಪ್ರಭಾಕರ ಖಾರ್ವಿ, ತೋಮಸ್ ರೋಡ್ರಿಗಸ್, ಮಾಧವ, ನಾಗೇಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

ಹೇಳಿಕೆ………….
ಹೊಂದಾಣಿಕೆ ಇಲ್ಲ ಕೆಲಸ ಆಗುತ್ತಿಲ್ಲ; ಎರಡು ತಿಂಗಳಿಂದ ಸಾಮಾನ್ಯ ಸಭೆ ಮಾಡಿಲ್ಲ, ಸಭೆಯಲ್ಲಿ ಜನರ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಲು ತಿರ್ಮಾನಿಸಿದರು ಕೂಡಾ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಯ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಯಾರೇ ಆಗಲಿ ಅಧಿಕಾರ, ಅವಕಾಶಗಳು ಇದ್ದಾಗ ಉತ್ತಮ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು………..ಶೇಖರ ಪೂಜಾರಿ ಸದಸ್ಯರು ಗ್ರಾ.ಪಂ.ಉಪ್ಪುಂದ.