ಬೈಂದೂರು; ಕೇಂದ್ರ ಸರ್ಕಾರ ದೇಶದ ಕ್ರೀಡಾ ಕ್ಷೇತದ ಪ್ರೋತ್ಸಾಹಕ ಯೋಜನೆಯಾದ ದೇಶದ ಇತಿಹಾಸದಲ್ಲಿ ಮೊದಲ ಪ್ರಯತ್ನವಾಗಿ ದೇಶದಾದ್ಯಂತ ಜಾರಿಗೆ ತಂದಿರುವ ಸಂಸದ್ ಖೇಲ್ ಮಹೋತ್ಸವ್-2025 ನೋಂದಣಿ ಪ್ರಕ್ರಿಯೆಗೆ ಸಂಸದ ಬಿ.ವೈ.ರಾಘವೇಂದ್ರ ಬೈಂದೂರಿನಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2030 ರಲ್ಲಿ ಕಾಮನ್ ವೇಲ್ತ್ ಗೇಮ್ಸ್ ಹಾಗೂ 2036 ರಲ್ಲಿ ಒಲಿಂಪಿಕ್ ಗೇಮ್ಸ್ ಆಯೋಜನೆ ಮಾಡಲು ಸಿದ್ದತೆ ನಡೆಸುತ್ತಿದೆ. ಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾ ಯೋಜನೆ ಜಾರಿಯ ಮೂಲಕ ದೇಶದಲ್ಲಿರುವ ಲಕ್ಷಾಂತರ ಕ್ರೀಡಾ ಪ್ರತಿಭೆಗಳನ್ನು ಮುನ್ನೆಲೆಗೆ ತಂದು ವಿಶ್ವದ ಬಲಿಷ್ಠ ರಾಷ್ಟ್ರಗಳ ಕ್ರೀಡಾ ಪಟುಗಳೊಂದಿಗೆ ಪೈಪೋಟಿ ನಡೆಸಿ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಂಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಅನೇಕ ಕ್ರೀಡಾ ಪಟುಗಳನ್ನು ಮತ್ತು ಕ್ರೀಡಾ ಆಸಕ್ತರನ್ನು ಮುನ್ನೆಲೆಗೆ ತರಲು ಈ ಯೋಜನೆ ಮಹತ್ವದ ಮೈಲಿಗಲ್ಲಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ.ಇದು ಕೇವಲ ದೇಶದ ಕ್ರೀಡಾ ಹಬ್ಬವಾಗದೆ ದೇಶದ ಹಿರಿಮೆ, ಗರಿಮೆ ವಿಶ್ವ ಭೂಪಟದಲ್ಲಿ ರಾರಾಜಿಸಲು ವೇದಿಕೆಯಾಗಿದೆ. ಈ ಮೂಲಕ ದೇಶದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಮುನ್ನುಡಿ ಬರೆಯಲು ವಿಶೇಷ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಬೈಂದೂರು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ,ಮಂಡಲದ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಭಾಗೀರಥಿ ಸುರೇಶ್,ಗೋಪಾಲ ಪೂಜಾರಿ ವಸ್ರೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.