ಬೈಂದೂರು: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕೇಂದ್ರ ಕಛೇರಿ ಚಿತ್ರದುರ್ಗ, ಬೆಂಗಳೂರು ವತಿಯಿಂದ ಮೇ.27ರಿಂದ ನಡೆಯುತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಪೌರ ಸೇವಾ ನೌಕರರು ಭಾಗಿಯಾಗಿದ್ದು ಸೇವೆ ಸ್ಥಗಿತಗೊಳಿಸಿ ಪ.ಪಂ ಎದುರು ಎಲ್ಲಾ ನೌಕರರು ಬುಧವಾರ ಪ್ರತಿಭಟಿಸಿದರು.ಇದರಿಂದ ಕಚೇರಿಯ ಯಾವುದೇ ಕೆಲಸಗಳು ನಡೆದಿಲ್ಲ. ಪ್ರಮುಖವಾಗಿ ನಗರ ಸ್ವಚ್ಚತೆ ಕಾರ್ಯಕ್ಕೂ ಅಡಚಣೆಯಾಗಿದೆ. ಪ್ರತಿಭಟನೆ ಮುಂದುವರಿದಲ್ಲಿ ನೀರಿನ ಸಮಸ್ಯೆಯೂ ತಲೆದೋರುವ ಸಾಧ್ಯತೆಗಳಿದೆ.
ಪೌರ ನೌಕರರ ಬೇಡಿಕೆಗಳನ್ನು ಸರಕಾರ ಈಡೇರಿಸಲು ಒತ್ತಾಯಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನ ಸೆಳೆದು, ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ, ಶಿಫಾರಸ್ಸು ಮಾಡಲು ಪ್ರತಿಭಟನಾಕಾರರು ಸಂಬಂದಪಟ್ಟ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ಕಂದಾಯ ನಿರೀಕ್ಷಕ ನಂದಯ್ಯ ಪೂಜಾರಿಯವರು ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.