ಬೈಂದೂರು: ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಬದುಕು ಸಾಂಸ್ಕ್ರತಿಕತೆ,ಸಂಪ್ರದಾಯ ಆಚರಣೆಯ ಹೂರಣ ಇದನ್ನು ಮುಂದಿನ ತಲೆಮಾರುಗಳಿಗೆ ಮುಂದುವರಿಸಲು ಇಂತಹ ಕಾರ್ಯಕ್ರಮ ಮುಖ್ಯ .ಮುಂಬೈ, ಬೆಂಗಳೂರಿನಂತಹ ಮಹಾನಗರ ಪ್ರದೇಶದಲ್ಲಿರುವ ಕುಂದಾಪುರ ತಾಲೂಕಿನವರು ಆ ಭಾಗದಲ್ಲಿಯೂ ಕೂಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕುಂದಾಪ್ರ ಕನ್ನಡದ ಕೀರ್ತಿ ವ್ರದ್ದಿಸಿದ್ದಾರೆ.ಇದು ಕೇವಲ ಭಾಷೆಯಲ್ಲ ಬದ್ಕ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಯಡ್ತರೆ ನೆಲ್ಯಾಡಿಬೈಲ್ನಲ್ಲಿ ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕತಿ ಪ್ರತಿಷ್ಠಾನ ಭಾನುವಾರ ಅಯೋಜಿಸಿದ “ಕೆಸರಲ್ಲೊಂದು ದಿನ-ಗಮ್ಮತ್ತ್” ಉದ್ಘಾಟಿಸಿ ಜೆಎನ್ಆರ್ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಮಕ್ಕಳಿಗೆ ಭಾಷಾಭಿಮಾನ, ಪ್ರೀತಿ, ನಮ್ಮ ಪರಂಪರೆ, ಸಂಪ್ರದಾಯಗಳನ್ನು ತಿಳಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೂ ಇದನ್ನು ವಿಸ್ತರಿಸಬೇಕು ಎಂದರು.
ಪ್ರತಿಷ್ಠಾನದ ಮುಖ್ಯಸ್ಥ ಶರತ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಪ್ರಮೋದ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಇವರನ್ನು ಸನ್ಮಾನಿಸಲಾಯಿತು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪ್ರಮುಖರಾದ ಕಿಶೋರ ಕುಮಾರ್ ಕುಂದಾಪುರ, ಎಚ್. ಜಯಶೀಲ ಎನ್. ಶೆಟ್ಟಿ, ಎನ್. ಜಗನ್ನಾಥ ಶೆಟ್ಟಿ, ಜಯಾನಂದ ಹೋಬಳಿದಾರ್, ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ವೆಂಕಟರಮಣ ಬಿಜೂರು, ರಘುರಾಮ ಪೂಜಾರಿ ಶಿರೂರು, ಮದನಕುಮಾರ್ ಉಪ್ಪುಂದ, ಎನ್. ದಿವಾಕರ ಶೆಟ್ಟಿ, ಉಪನ್ಯಾಸಕ ನವೀನ್ ಎಚ್. ಜಿ., ಪತ್ರಕರ್ತ ವಸಂತ ಗಿಳಿಯಾರ್ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಜಿ. ಸ್ವಾಗತಿಸಿ, ಅರುಣಕುಮಾರ್ ಶಿರೂರು ನಿರೂಪಿಸಿದರು. ಸುನಿಲ್ ಎಚ್. ಜಿ. ವಂದಿಸಿದರು.ಯಡ್ತರೆ ಬೈಪಾಸಿನಿಂದ ಮೆರವಣಿಗೆ ನಡೆಯಿತು.ಮಹಿಳೆ, ಪುರುಷರು ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಥ್ವಿ ಕ್ರೀಡಾ ಮತ್ತು ಯುವಕ ಸಂಘ ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪುಂದ, ಬೈಂದೂರು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸಹಯೋಗ ನೀಡಿದ್ದವು.
ನಾನು ಕೂಡ ಕುಂದಾಪ್ರ ಕನ್ನಡ ಭಾಷಿಗನಾಗಿದ್ದು, ಈ ಭಾಷೆಯಲ್ಲಿ ಹಲವಾರು ಚಲನಚಿತ್ರಗಳ ನಿರ್ಮಾಣದ ಜತೆಗೆ ಹಾಡುಗಳನ್ನು ಬರೆದಿದ್ದು, ಅವುಗಳು ಈಗಾಗಲೇ ಜನರ ಬಾಯಲ್ಲಿ ಗುಣುಗುಣ ಸುತ್ತಿದೆ. ಇದೇ ರೀತಿ ಈಗ ವೀರ ಚಂದ್ರಹಾಸ ಯಕ್ಷಗಾನ ಪ್ರಸಂಗವನ್ನು ಬೆಳ್ಳಿತೆರೆಯ ಮೇಲೆ ತರುವ ಸಾಹಸ ಮಾಡಿದ್ದೇನೆ. ನಮ್ಮ ಯಕ್ಷಗಾನಕ್ಕಿರುವ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ. ನಿಮ್ಮೆಲ್ಲರ ಸಹಕಾರವಿರಲಿ.- ರವಿ ಬಸ್ರೂರು, ಸಂಗೀತ ನಿರ್ದೇಶಕ..