ಶಿರೂರು; ಇಲ್ಲಿನ ಶಿರೂರು ತೂದಳ್ಳಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಹೊಂಡ ಬಾಯ್ದೆರೆದುಕೊಂಡಿದೆ.ಕಳೆದ ಎರಡು ತಿಂಗಳ ಹಿಂದೆ ಮೇಲ್ಗಡೆಯ ಸ್ಲ್ಯಾಬ್ ಕಳಚಿಹೋಗಿದ್ದು ಹೆದ್ದಾರಿ ಕಾಮಗಾರಿ ಕಂಪೆನಿ ಇದುವರೆಗೆ ದುರಸ್ತಿ ಮಾಡಿಲ್ಲ. ಇಲ್ಲಿನ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇದುವರೆಗೆ ದುರಸ್ತಿ ನಡೆದಿಲ್ಲ.
ಪ್ರತಿನಿತ್ಯ ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು ಅನೇಕ ಬಾರಿ ಗಮನಕ್ಕೆ ಬಾರದೆ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.ಮಳೆಗಾಲದಲ್ಲಿ ಚರಂಡಿ ನೀರು ಹರಿಯುತ್ತಿದ್ದು ಒಂದೊಮ್ಮೆ ಕಾಲು ಜಾರಿಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಡೆಸುವ ಕಂಪೆನಿ ತಕ್ಷಣ ದುರಸ್ತಿ ಮಾಡಬೇಕೆನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
