ಬೈಂದೂರು,ಜು.13: ಅಳಿವೆಕೋಡಿ ಗ್ರಾಮದ ಮೀನುಗಾರಿಕಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಶೀಘ್ರ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಧರಣಿ ನಡೆಸಿದರು.ಧರಣಿ ನೇತ್ರತ್ವ ವಹಿಸಿ ಮಾತನಾಡಿದ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಉಪ್ಪುಂದ ಮಾತನಾಡಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು. ರಸ್ತೆಯ ಹಲವೆಡೆ ದೊಡ್ಡ ಗುಂಡಿಗಳು ಉಂಟಾಗಿವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಪ್ರತಿದಿನ ತೀವ್ರ ತೊಂದರೆಯಾಗುತ್ತಿದೆ.ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ವಾಹನಗಳು ಸಂಚರಿಸುತ್ತಿದ್ದು. ಸುಮಾರು 150 ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟು ಸಂಚಾರ ದುಸ್ತರವಾಗಿದೆ.ಹೀಗಾಗಿ ಶೀಘ್ರ ದುರಸ್ಥಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್ ರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವೀರಭದ್ರ ಖಾರ್ವಿ,ಟಿ.ಗೋಪಾಲ ಖಾರ್ವಿ,ರಾಘವೇಂದ್ರ ಖಾರ್ವಿ,ಗಣೇಶ ಎಮ್.ಕೆ,ರವೀಂದ್ರ ಖಾರ್ವಿ,ಸೋಮಶೇಖರ್,ಮೀನುಗಾರ ಮುಖಂಡರು,ಅಳಿವೆಕೋಡಿ ಹಾಗೂ ತಾರಾಪತಿ ಗ್ರಾಮಸ್ಥರು ಹಾಜರಿದ್ದರು.