ಶಿರೂರು: ಕಟ್ಟಡ ಕಾರ್ಮಿಕರ ಮಹಿಳಾ ಉಪಸಮಿತಿ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೈಂದೂರು, ಸೋಮೇಶ್ವರ,ದೊಂಬೆ, ಕರಾವಳಿ ಮಾರ್ಗವಾಗಿ ಶಿರೂರಿಗೆ ಸರಕಾರಿ ಬಸ್ಸು ವ್ಯವಸ್ಥೆ ಮಾಡಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಶಿರೂರು ಗ್ರಾಮ ಪಂಚಾಯತ್ ಎದುರು ಮಂಗಳವಾರ ಶಿರೂರು ನಾಗರಿಕರಿಂದ ಪ್ರತಿಭಟನೆ ನಡೆಯಿತು.
ಸಿಐಟಿಯು ನಾಯಕ ಸುರೇಶ್ ಕಲ್ಲಾಗರ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಸಿನ ಸೇವೆ ಹಾಗೂ ಅದರಲ್ಲಿ ಬಡ ಜನರಿಗೆ ಸಿಗುವ ಸೌಲಭ್ಯಗಳನ್ನು ವಂಚಿತರಾದ ಜನರಿಗೆ ಸಿಗಬೇಕು ಎಂದು ಹೋರಾಟ ನಡೆಯುತ್ತಿದ್ದರೂ ಜಿಲ್ಲಾ ಸಾರಿಗೆ ಪ್ರಾಧಿಕಾರ ಕಾಳಜಿ ವಹಿಸುತ್ತಿಲ್ಲ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಪರಮಾಧಿಕಾರ ಇರುವುದರಿಂದ ಜನರಿಗೆ ಅನುಕೂಲವಾಗುವ ಸರಕಾರಿ ಬಸ್ಸು ಗ್ರಾಮೀಣ ಪ್ರದೇಶಗಳಿಗೆ ಆರಂಭಿಸಲು ಕ್ರಮವಹಿಸಬೇಕು.ಶಿರೂರಿನ ಮಹಿಳೆಯರಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನ್ಯಾಯ ಸಿಗದಿದ್ದರೆ ಉಡುಪಿ ಸಾರಿಗೆ ಇಲಾಖೆ ಎದುರು ಧರಣಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೀಲಾವತಿ,ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ,ಬೈಂದೂರು ಕಟ್ಟಡ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ,ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್, ಸಹ ಪದಾಧಿಕಾರಿಗಳಾದ ಶ್ರೀಧರ ದೇವಾಡಿಗ ಉಪ್ಪುಂದ, ಗೊಪಾಲ ಕೃಷ್ಣ, ರೋನಿ ನಜರೆತ್,ಸಿಡಬ್ಲ್ಯೂಎಫ್ಐ ರಾಜ್ಯ ಸಮಿತಿ ಸದಸ್ಯ ರಮೇಶ್ ಗುಲ್ವಾಡಿ ಉಪಸ್ಥಿತರಿದ್ದರು.
ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರ್ಮಹ್ಮದ್, ಶಿರೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ,ಪದ್ಮಾವತಿ ಮೊಗೇರ್ ಹಾಜರಿದ್ದರು.ಬಳಿಕ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.