ಬೈಂದೂರು; ಬೈಂದೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ.ಬಿಜೆಪಿಯ ಘಟಾನುಘಟಿ ನಾಯಕರನ್ನು ಕಾಂಗ್ರೇಸ್ ಪಕ್ಷಕ್ಕೆ ಸೆಳೆಯುವ ಮೂಲಕ ಕೇಂದ್ರ ಕೇಂದ್ರ ಸ್ಥಾನದಲ್ಲೆ ಆಘಾತ ನೀಡಿದೆ.ಬಿಜೆಪಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯರುಗಳಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಶಂಕರ ಪೂಜಾರಿ,ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ,ಬಿಜೆಪಿ ಮುಖಂಡ ಸದಾಶಿವ ಡಿ.ಪಡುವರಿ ಸೇರಿದಂತೆ 150ಕ್ಕೂ ಅಧಿಕ ಮುಖಂಡರು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿಂದೂತ್ವ ಯಾರ ಮನೆಯ ಆಸ್ತಿ ಅಲ್ಲ.ನಾನು ಕೂಡ ಹಿಂದೂ ನನ್ನಂತೆ ಸಾವಿರಾರು ಜನ ಕಾಂಗ್ರೇಸ್ ಕಾರ್ಯಕರ್ತರು ನಿತ್ಯ ಪೂಜೆ,ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ.ಆದರೆ ಬಿಜೆಪಿ ಹಿಂದೂತ್ವ ರಾಜಕೀಯ ಲಾಭದ ಹಿಂದೂತ್ವವಾಗಿದೆ.ರಾಜ್ಯದ ಡಬಲ್ ಇಂಜಿನ್ ಸರಕಾರ ನಿರುದ್ಯೋಗ,ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ.ಬಿಜೆಪಿ ಜನರ ಬದುಕಿನ ಬಗ್ಗೆ ಚಿಂತೆ ಮಾಡಲ್ಲ ಭಾವನೆಗೆ ಬೆಲೆ ಕೊಡ್ತಾರೆ.ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ನಿಗಮ ಸೇರಿದಂತೆ ಇಲ್ಲಿನ ಪ್ರವಾಸೋಧ್ಯಮ,ಉದ್ಯೋಗ ಸೇರಿದಂತೆ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸುತ್ತೇನೆ.ಮೀನುಗಾರರ ಬೇಡಿಕೆಗಳಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.

ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಸುಳ್ಳು ಅಪಪ್ರಚಾರಗಳ ಮೂಲಕ ಕಳೆದ ಬಾರಿ ನನ್ನನ್ನು ಪರಾಭವಗೊಳಿಸಲಾಗಿತ್ತು ಆದರೆ ಈ ಬಾರಿ ಜನರು ಪ್ರಜ್ಞಾವಂತರಾಗಿದ್ದಾರೆ ಬಿಜೆಪಿಯ ಹಸಿಸುಳ್ಳು ನಾಟಕಗಳಿಗೆ ಮತದಾರರು ಬೆಲೆ ನೀಡಲಾರರು.ಸ್ವಂತ ಕಾರ್ಯಕರ್ತರನ್ನು,ಪಕ್ಷದ ಹಿರಿಯ ಮುಖಂಡರನ್ನು ಕೇವಲ ರಾಜಕೀಯವಾಗಿ ಮಾತ್ರ ಬಳಸಿಕೊಂಡು ಅಧಿಕಾರದ ಲಾಭ ಮಾತ್ರ ಆರ್.ಎಸ್.ಎಸ್ ಮುಖಂಡರು ಪಡೆಯುತ್ತಾರೆ.ಬಿಜೆಪಿಯವರಿಗೆ ನಂಬಿಸಿ ಮೋಸ ಮಾಡುವುದು ಚೆನ್ನಾಗಿ ತಿಳಿದಿದೆ.ಆದರೆ ಕಾಂಗ್ರೇಸ್ ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸೂಕ್ತ ಸ್ಥಾನಮಾನ ನೀಡುತ್ತಿದೆ ಹಾಗೂ ಗೌರವ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಯ.ಬಿ ಶೆಟ್ಟಿ ಉಪ್ಪುಂದ,ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಎಮ್.ಎ.ಗಫೂರ್,ಎಸ್.ರಾಜು ಪೂಜಾರಿ,ಮಾಜಿ ಜಿ.ಪಂ ಸದಸ್ಯರಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಶಂಕರ ಪೂಜಾರಿ,ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ,ಸದಾಶಿವ ಡಿ.ಪಡುವರಿ,ಮಾಧ್ಯಮ ವಕ್ತಾರ ಡಾ.ಸುಬ್ರಹ್ಮಣ್ಯ ಭಟ್,ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳು,ರಾಜ್ಯ ಕಾಂಗ್ರೇಸ್ ಪದಾಧಿಕಾರಿಗಳು ಹಾಗೂ ಕಾಂಗ್ರೇಸ್ ಮುಖಂಡರು ಹಾಜರಿದ್ದರು.

ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.ಪ್ರದೀಪ್ ಕುಮಾರ್ ಶೆಟ್ಟಿ ಅಂಪಾರು ವಂದಿಸಿದರು.
News/pic: Girish shiruru